Homeಕರ್ನಾಟಕಜಿ.ಟಿ.ದೇವೇಗೌಡರ ಮುನಿಸು ಗಂಡ ಹೆಂಡತಿ ಜಗಳ ಇದ್ದಂಗೆ: ಹೆಚ್‌ ಡಿ ಕುಮಾರಸ್ವಾಮಿ

ಜಿ.ಟಿ.ದೇವೇಗೌಡರ ಮುನಿಸು ಗಂಡ ಹೆಂಡತಿ ಜಗಳ ಇದ್ದಂಗೆ: ಹೆಚ್‌ ಡಿ ಕುಮಾರಸ್ವಾಮಿ

ರಸ್ತೆಗೆ ತಮ್ಮ ಹೆಸರು ನಾಮಕರಣ ಮಾಡುವ ವಿಷಯ ವಿವಾದದ ಸ್ವರೂಪ ಪಡೆದುಕೊಂಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣಮೌನಕ್ಕೆ ಶರಣಾಗಿದ್ದಾರೆ. ರಸ್ತೆಗೆ ತಮ್ಮ ಹೆಸರಿಡಬೇಕು ಎನ್ನುವ ಆಕಾಂಕ್ಷೆ ಬಹುಶಃ ಸಿಎಂ ಅವರಿಗೆ ಇರಬಹುದು. ಅದಕ್ಕೆ ಅವರು ಜಾಣಮೌನಕ್ಕೆ ಶರಣಾಗಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಚಿತಾವಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಮೈಸೂರಿನಲ್ಲಿ ಶನಿವಾರ ದಿಶಾ ಸಭೆಗೂ ಮೊದಲು ಮಾಧ್ಯಮಗಳ ಜತೆ ಮಾತನಾಡಿದ ಅವರು, “ಒಂದು ವೇಳೆ ಯಾವುದಾರೂ ರಸ್ತೆ ಅಥವಾ ಬಡಾವಣೆಗೆ ತಮ್ಮ ಹೆಸರು ಇಟ್ಟುಕೊಳ್ಳಬೇಕು ಎನ್ನುವ ಮನಸ್ಸಿದ್ದರೆ, ದೇವನೂರು ಬಡಾವಣೆಗೆ, ಕೆಸರೆ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡಲಿ. ಅಲ್ಲಿಯೇ ಅಲ್ಲವೇ ಅವರು ಬಹುದೊಡ್ಡ ಸಾಧನೆ ಮಾಡಿರುವುದು” ಎಂದು ವ್ಯಂಗ್ಯವಾಡಿದರು.

ಕರ್ನಾಟಕಕ್ಕೆ ಸಿದ್ದರಾಮಯ್ಯ ಹೆಸರು ಇಡಲಿ

ಸಿದ್ದರಾಮಯ್ಯ ಅವರ ಹೆಸರನ್ನು ರಸ್ತೆಗೆ ಮಾತ್ರವಲ್ಲ, ಮೈಸೂರಿಗೇ ಇಡಬೇಕು ಎಂದು ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ, “ಮೈಸೂರಿಗೆ ಏಕೆ, ಇಡೀ ಕರ್ನಾಟಕಕ್ಕೆ ಇಟ್ಟುಬಿಡಿ. ಈಗಷ್ಟೇ 15% ಏರಿಕೆ ಮಾಡಿದ್ದಾರೆ, ಅದುವೇ ತಾನೇ ಇವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ. ಮೈಸೂರು ರಾಜಮನೆತನ, ದೇವರಾಜ ಅರಸು ಅವರು ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅದಕ್ಕೆ ಇವರ ಹೆಸರು ಇಡಬೇಕು” ಎಂದು ಟಾಂಗ್ ಕೊಟ್ಟರು.

“ಮೈಸೂರು ನಗರಕ್ಕೆ, ಇಡೀ ರಾಜ್ಯದ ಅಭಿವೃದ್ಧಿಗೆ ಯಾರು ಎಷ್ಟು ಕೊಡುಗೆ ಕೊಟ್ಟಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸರ್ಕಾರ ಮತ್ತು ಸಿದ್ದರಾಮಯ್ಯ ಅವರು ಒಡೆಯರ್ ಅವರ ಮನೆತನಕ್ಕೆ ಅಪಮಾನ ಮಾಡುತ್ತಿದೆ. ರಸ್ತೆಯಲ್ಲಿ ಬಿಸಿಲಿನಲ್ಲಿ ನಿಂತು ಯಾಕೆ ಪ್ರತಿಭಟನೆ ಮಾಡುತ್ತೀರಾ ಎಂದು ಬಿಜೆಪಿ ಗೆಳೆಯರಿಗೆ ಕೇಳಿದ್ದೇನೆ. ಇಲ್ಲಿ ಸಿಎಂ ಅವರೇ ಚಿತಾವಣೆ ಮಾಡುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಪ್ರಿನ್ಸೆಸ್ ರಸ್ತೆ ಬದಲಾವಣೆ ಮುನ್ನಲೆಗೆ ಬಂದಾಗಲೂ ಸಿಎಂ ಮೌನವಾಗಿದ್ದಾರೆ! ಅವರು ಜಾಣಮೌನ ವಹಿಸಿದ್ದಾರೆ. ಸುಖಾಸುಮ್ಮನೆ ಮಹಾರಾಜರ ಹೆಸರು ಇರುವ ರಸ್ತೆಯ ಹೆಸರು ತೆಗೆಯುವ ಬದಲು ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಇಟ್ಟರೆ ಆಯಿತು” ಎಂದು ತರಾಟೆಗೆ ತೆಗೆದುಕೊಂಡರು.

ಜನರ ಹೃದಯದಲ್ಲಿರಬೇಕು

“ನಾನು ಈ ಹಿಂದೆ ಬಿಜೆಪಿ ಜತೆ ಸೇರಿ ಸರಕಾರ ಮಾಡಿದ್ದೆ. ಮುಖ್ಯಮಂತ್ರಿಯಾಗಿ ನಾನು ಮೈಸೂರಿಗೆ ಎಷ್ಟು ಕೊಡುಗೆ ನೀಡಿದ್ದೇನೆ? ಸಿದ್ದರಾಮಯ್ಯ ಅವರು ಡಿಸಿಎಂ ಆಗಿ, ಪ್ರತಿಪಕ್ಷ ನಾಯಕರಾಗಿ, ಎರಡು ಅವಧಿಗೆ ಸಿಎಂ ಆಗಿ ಏನು ಕೊಡುಗೆ ನೀಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆಯಲಿ. 2006-2007ರಲ್ಲಿ ನಾನು ಮೈಸೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಎಷ್ಟು ಮನೆ ಮಂಜೂರು ಮಾಡಿದ್ದೇನೆ, ಎಷ್ಟು ರಾಜಕಾಲುವೆ ಅಭಿವೃದ್ಧಿ ಮಾಡಿದ್ದೇನೆ, ಜೆ ನರ್ಮ್ ಯೋಜನೆ ಮೂಲಕ ₹2000 ಕೋಟಿ ಅನುದಾನವನ್ನು ಮೈಸೂರಿಗೆ ತಂದಿದ್ದೇನೆ. ಅದೆಲ್ಲ ಮಾಡಿದ್ದು ನಾನೇ ಎಂದು ಎಲ್ಲಾದರೂ ಹೇಳಿದ್ದೇನೆಯೇ? ಅದಕ್ಕೆ ಹಾದಿಬೀದಿಗೆ ನನ್ನ ಹೆಸರು ಇಡಿ ಎಂದು ಕೇಳಲು ಆಗುತ್ತದೆಯೇ? ನಾವೇನು ಕೆಲಸ ಮಾಡಿದ್ದೇವೆ ಎಂಬ ಆತ್ಮತೃಪ್ತಿ ಇರಬೇಕು, ಅದು ಜನರ ಹೃದಯದಲ್ಲಿರಬೇಕು” ಎಂದರು.

ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ

ಅಪರೇಷನ್ ಹಸ್ತದ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯಿಸಿ, “ಅದು ನಡೆಯುತ್ತಲೇ ಇದೆ. ನಮ್ಮ ಪಕ್ಷದಲ್ಲಿ 18 ಶಾಸಕರಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಒಟ್ಟಿಗೆ ಇದ್ದಾರೆ. ಅದನ್ನೇ ಶಾಸಕ ಹರೀಶ್ ಗೌಡ ಹೇಳಿದ್ದಾರೆ. ಬೆಳಗಾವಿಯಲ್ಲಿ ಶಾಸಕರು ಕೂತು ಮಾತನಾಡಿದ್ದಾರೆ. ನಮ್ಮ ಶಾಸಕರು ನಮ್ಮ ಜೊತೆ ಇರುತ್ತಾರೆ. ಮನೆ ಎಂದ‌ ಮೇಲೆ ಮುನಿಸು ಇರೋದಿಲ್ಲವೇ? ಶಾಸಕ ಜಿ.ಟಿ.ದೇವೇಗೌಡರ ನಡುವಿನ ಮುನಿಸು ಗಂಡ ಹೆಂಡತಿಯ ಮುನಿಸು. ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ” ಎಂದರು.

“ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆದಿಲ್ಲ. ಇನ್ನು ನಮ್ಮ ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆಯಬೇಕು. ಆ ನಂತರ ರಾಜ್ಯಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತೇವೆ” ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments