ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಮಾದರಿ ಭಯಾನಕ ಹತ್ಯೆಯ ಘಟನೆ ನಡೆದಿದೆ.
ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿ ಆನಂತರ ಮೃತ ದೇಹವನ್ನು ತುಂಡರಿಸಿ ಫ್ರಿಡ್ಜ್ ನಲ್ಲಿ ಇರಿಸಲಾಗಿದೆ. ಈ ಘಟನೆ ಬೆಂಗಳೂರಿನ ಹೃದಯ ಭಾಗವಾದ ವೈಯಾಲಿಕಾವಲ್ನ ಮುನ್ನೇಶ್ವರ ಬ್ಲಾಕ್ನ ಮನೆಯೊಂದರ ಮೊದಲ ಮಹಡಿಯಲ್ಲಿ ನಡೆದಿದೆ.
ಘಟನೆಯ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, “ಮಹಿಳೆಯನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಫ್ರಿಡ್ಜ್ನಲ್ಲಿ ಇಟ್ಟಿರುವ ಘಟನೆ ನಡೆದಿದೆ. ಇದು ಸಂಭವಿಸಿ ನಾಲ್ಕೈದು ದಿನಗಳು ಆಗಿರಬಹುದು. ಕೊಲೆಯಾಗಿರುವ ಯುವತಿಯ ಗುರುತು ಪತ್ತೆಯಾಗಿದೆ. ಹೊರ ರಾಜ್ಯದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವೆ” ಎಂದು ತಿಳಿಸಿದ್ದಾರೆ.
ಯುವತಿ ಕಳೆದ ಮೂರು ತಿಂಗಳ ಹಿಂದಷ್ಟೇ ಈ ಮನೆಗೆ ಬಂದಿದ್ದಳು. ಇಂದು ಬೆಳಗ್ಗೆ ಆಕೆಯ ತಾಯಿ-ಸಹೋದರಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಹತ್ಯೆ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.


