ಆಡಳಿತಾತ್ಮಕ ಹಿತದೃಷ್ಟಿಯಿಂದ ಆರ್ಥಿಕ ಇಲಾಖೆಯು ಸಹಮತಿ ಮೇರೆಗೆ ಇಂಜಿನಿಯರ್ ವೃಂದದಲ್ಲಿ ತಾತ್ಕಾಲಿಕವಾಗಿ ಐದು ಮುಖ್ಯ ಹುದ್ದೆಗಳನ್ನು ಸೃಷ್ಟಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಆರ್ಥಿಕ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್ ವೃಂದದಲ್ಲಿ ವಿವಿಧ ಕಾರಣಗಳಿಂದ ಭವಿಷ್ಯದಲ್ಲಿ ಉದ್ಭವವಾಗುವ ಸ್ಥಾನಗಳಿಗೆ ಎದುರಾಗಿ ಸರಿದೂಗಿಸುವ ಹಾಗೂ ಇದನ್ನು ಯಾವುದೇ ಕಾರಣಕ್ಕೂ ಪೂರ್ವ ನಿದರ್ಶನವಾಗಿ ಪರಿಗಣಿಸುವಂತಿಲ್ಲವೆಂಬ ಷರತ್ತಿಗೊಳಪಡಿಸಿ ಈ ಹುದ್ದೆಗಳನ್ನು ಸೃಜಿಸಲಾಗಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ಸೃಜಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ. 90,500-1,23,300/-ರ ಮುಖ್ಯ ಇಂಜಿನಿಯರ್ ವೃಂದದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ಮುಂದಿನ ಆದೇಶದವರೆಗೆ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
ಮುಕ್ಕಣ್ಣ ನಾಯ್ಕ ಜಿ ಆರ್ ಅವರನ್ನು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಧಿಕಾರ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಜಗದೀಶ್ ಜಿ ರಾಠೋಡ ಅವರನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಉತ್ತರ ವಲಯ ವಿಜಯಪುರಕ್ಕೆ ಮುಖ್ಯ ಇಂಜಿನಿಯರ್ ಆಗಿ ನೇಮಿಸಲಾಗಿದೆ.
ಹನಮಂತ ಜಿ ದಾಸರ ಅವರನ್ನು ನೀರಾವರಿ ಕೇಂದ್ರ ವಲಯ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುನಿರಾಬಾದ್ಗೆ ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಲಾಗಿದೆ.
ಪವಾರ ಜಿ ಜಿ ಎಂಬುವರನ್ನು ಕೃಷ್ಣಾ ಕಾಡಾ, ಭೀಮರಾಯನಗುಡಿ ಆಡಳಿತಾಧಿಕಾರಿಯಾಗಿ, ವೆಂಕಟೇಶಲು ಜಿ.ವಿ ಎಂಬುವರನ್ನು ಕರ್ನಾಟಕ ನೀರಾವರಿ ನಿಗಮ ತಾಂತ್ರಿಕ ವಿಭಾಗಕ್ಕೆ ನಿರ್ದೇಶಕ ಸ್ಥಾನಕ್ಕೆ ಹಾಗೂ ಕಿರಣ ಹೆಚ್ ಮಸೂತಿ ಅವರನ್ನು ಅಟಲ್ ಭೂಜಲ ಯೋಜನೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ.