ತುಂಗಭದ್ರ ಅಣೆಕಟ್ಟೆ ಕೆಳಭಾಗದ ನಡುಗಡ್ಡೆಯಲ್ಲಿ ನಿಂತು ವರದಿ ಮಾಡುತ್ತಿದ್ದ ಮಾಧ್ಯಮದವರನ್ನು ಹೊರಗೆ ಕಳುಹಿಸಲಾಗುತ್ತಿದೆ. ನಡುಗಡ್ಡೆ ಪ್ರದೇಶಕ್ಕೆ ಇತರ ಮಾಧ್ಯಮದವರನ್ನು ತೆರಳದಂತೆ ತಡೆಹಿಡಿಯಲಾಗಿದೆ.
ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ವೇಳೆ ಮಾಧ್ಯಮದವರು ದೂರದಲ್ಲೂ ಇರಕೂಡದು, ಅವರು ಇದ್ದಾರೆ ಎಂದರೆ ಕೆಲಸ ಮಾಡಿವುದಿಲ್ಲ ಎಂದು ಕಡ್ಡಿ ಮುರಿದಂತೆ ಮುಖ್ಯ ಸಲಹೆಗಾರ ಕನ್ನಯ್ಯ ನಾಯ್ಡು ಸೂಚಿಸಿದ್ದಾರೆ.
ಧುಮ್ಮುಕ್ಕಿ ಹರಿಯುತ್ತಿರುವ ಅಣೆಕಟ್ಟೆಯ ತೂಬಿನಲ್ಲಿ ಗೇಟ್ ಅಳವಡಿಸುವುದು ದೇಶದ ಇತಿಹಾಸದಲ್ಲೇ ಪ್ರಮುಖ ಘಟನೆ. ಇದರಲ್ಲಿ ಸ್ವಲ್ಪ ಹೆಚ್ಚುಕಮ್ಮಿ ಆದುದು ವರದಿಯಾಗಿಬಿಟ್ಟರೆ ಬಹಳ ದೊಡ್ಡ ಮುಜುಗರದ ಸ್ಥಿತಿಯಾಗುತ್ತದೆ. ಜೊತೆಗೆ ಇದು ಹಕ್ಕು ಸ್ವಾಮ್ಯದ ವಿಚಾರವೂ ಹೌದು. ಹೀಗಾಗಿ ವಿಡಿಯೊ ಮಾಡುವುದನ್ನು ಸಹ ನಿರ್ಬಂಧಿಸಬೇಕು ಎಂದು ತುಂಗಭದ್ರಾ ಮಂಡಳಿಯವರಿಗೆ ಹೇಳಿದ್ದಾರೆ.
ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿಗೆ ತಾತ್ಕಾಲಿಕ ಗೇಟ್ ಅಳವಡಿಕೆ ಪ್ರಯತ್ನ ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅರಂಭಗೊಂಡಿದೆ. ಕೆಲಸ ಬಹಳ ನಿಧಾನವಾಗಿ ನಡೆಯುತ್ತಿದೆ. ಕ್ರಸ್ಟ್ ಗೇಟ್ ನಂಬರ್ ಹಾಕಿದ ಬೃಹತ್ ಬ್ಯಾಲೆನ್ಸಿಂಗ್ ತೊಲೆಯನ್ನು ಸದ್ಯ ಕಳಚಿ ಇಡಲಾಗಿದೆ.
ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿನ ಮೇಲ್ಭಾಗದಲ್ಲಿ ಇರುವ ಸ್ಕೈವಾಕ್ ಕ್ರೇನ್ಗಳ ಚಲನೆಗೆ ಅಡ್ಡಿ ಆಗುತ್ತಿದೆ, ಹೀಗಾಗಿ ಅದನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಸ್ಕೈವಾಕ್ ತೆಗೆಯಲು ಇನ್ನೂ ಎರಡು ಗಂಟೆ ಹಿಡಿಯಬಹುದು, ಬಳಿಕವಷ್ಟೇ ಗೇಟ್ ಅಳವಡಿಸಲಾಗುತ್ತದೆ ಎನ್ನಲಾಗಿದೆ.