Homeಕರ್ನಾಟಕಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌: ಸಚಿವ ಕೃಷ್ಣ ಬೈರೇಗೌಡ

ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌: ಸಚಿವ ಕೃಷ್ಣ ಬೈರೇಗೌಡ

ಮಾನ್ಸೂನ್‌ ಚುರುಕಾಗಿದ್ದು, ರಾಜ್ಯದ 1,763 ಗ್ರಾಮಗಳಲ್ಲಿ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮಂಗಳವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೈಸೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಲ್ಲ ಜಿಲ್ಲಾಧಿಕಾರಿಗಳಿಗೂ ಅವರ ಜಿಲ್ಲೆಯ ಯಾವ ಭಾಗದ ಯಾವ ಗ್ರಾಮದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಸಮಸ್ಯಾತ್ಮಕ ಗ್ರಾಮ ಪಂಚಾಯಿತಿಗಳ ಸಂಭವನೀಯ ಪಟ್ಟಿ ನೀಡಲಾಗಿದೆ” ಎಂದರು.

“ಜಿಲ್ಲಾಧಿಕಾರಿಗಳು ಪ್ರತಿಯೊಂದು ಸಮಸ್ಯಾತ್ಮಕ ಗ್ರಾಮ ಪಂಚಾಯಿತಿಯಲ್ಲೂ ಅಧಿಕಾರಿಗಳ ಟಾಸ್ಕ್‌ಫೋರ್ಸ್‌ ರಚಿಸಿ ಮುನ್ನೆಚ್ಚರಿಕಾ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಟಾಸ್ಕ್‌ಫೋರ್ಸ್‌ನಲ್ಲಿ ಕಂದಾಯ ಇಲಾಖೆ ನೌಕರರು, ಪಂಚಾಯತ್‌ ರಾಜ್‌ ಇಂಜಿನಯರ್‌ ವಿಭಾಗ, ಅಗ್ನಿಶಾಮಕ ವಿಭಾಗ, ಪೊಲೀಸ್‌ ಇಲಾಖೆ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳು ಇರಲಿದ್ದಾರೆ” ಎಂದು ಹೇಳಿದರು.

ಕಾಳಜಿ ಕೇಂದ್ರಗಳ ರಚನೆಗೆ ಸೂಚನೆ

“ಪ್ರವಾಹ ಸಾಧ್ಯತೆ ಇರುವ ತಾಲೂಕುಗಳಲ್ಲಿ ಶೀಘ್ರ ಕಾಳಜಿ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಮುಂಜಾಗರೂಕತೆಯ ಕ್ರಮವಾಗಿ ಸ್ಥಳ ಗುರುತಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಪಿ.ಡಿ. ಖಾತೆಗಳಲ್ಲಿ ಈಗಾಗಲೇ 787 ಕೋಟಿ ರೂ. ಹಣ ಇದ್ದು, ಈ ಹಣವನ್ನು ಪರಿಹಾರ ಹಾಗೂ ಕಾಳಜಿ ಕೇಂದ್ರಗಳ ಸ್ಥಾಪನೆಗೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ಅಗತ್ಯವಿದ್ದರೆ ರಾಜ್ಯ ಸರ್ಕಾರ ಮತ್ತಷ್ಟು ಹಣ ನೀಡಲು ಸಿದ್ದವಿದೆ” ಎಂದೂ ಸಚಿವರು ಮಾಹಿತಿ ನೀಡಿದರು.

ಬಗರ್‌ಹುಕುಂ ಅರ್ಜಿ ವಿಲೇಗೆ ಗಡುವು

“ಬಗರ್‌ ಹುಕುಂ ಅರ್ಜಿಗಳ ವಿಲೇವಾರಿಗೆ ತಹಶೀಲ್ದಾರರಿಗೆ 8 ತಿಂಗಳ ಗಡುವು ನೀಡಲಾಗಿದೆ. ಬಡ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಕ್ರಮ ಸಾಗುವಳಿಯ ಸಕ್ರಮೀಕರಣಕ್ಕಾಗಿ ಬಗರ್‌ಹುಕುಂ ಅಡಿ ರಾಜ್ಯ ಸರ್ಕಾರ ಅರ್ಜಿ ಸ್ವೀಕರಿಸಿದೆ. ಲಕ್ಷಾಂತರ ಅರ್ಜಿಗಳು ಈಗಾಗಲೇ ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಮುಂದಿನ 8 ತಿಂಗಳಲ್ಲಿ ವಿಲೇವಾರಿ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದರು.

“ಬಡ ರೈತರಿಗೆ ಶೇ.100 ನೆಮ್ಮದಿ ನೀಡಬೇಕು ಮುಂದಿನ ದಿನಗಳಲ್ಲಿ ಅವರ ದಾಖಲೆಗಳ ಬಗ್ಗೆ ಸಾಸಿವೆ ಕಾಳಿನಷ್ಟೂ ಅನುಮಾನ ಇರಬಾರದು, ಕೋರ್ಟ್‌ ಕಚೇರಿ ಸುತ್ತುವಂತೆ ಆಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಬಗರ್‌ ಹುಕುಂ ಜಮೀನನ್ನು ದುರಸ್ಥಿಗೊಳಿಸಿ ಹೊಸ ಹಿಸ್ಸಾ ನಂಬರ್‌ ಜೊತೆಗೆ ಸಾಗುವಳಿ ಚೀಟಿಯನ್ನು ಡಿಜಿಟಲೀಕರಣ ಗೊಳಿಸಿ ನೀಡಬೇಕು ಹಾಗೂ ಭೂಮಿಯನ್ನು ಕ್ರಮ (ರಿಜಿಸ್ಟರ್) ಮಾಡಿ ರೈತರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರಂಟಿ

“ರಾಜ್ಯದಾದ್ಯಂತ ಸುಮಾರು 4 ಕೋಟಿ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.92 ಕೋಟಿ ಆರ್‌ಟಿಸಿದಾರರನ್ನು ಸಂಪರ್ಕಿಸಿ ಆ ಪೈಕಿ 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಮೈಸೂರು ವಿಭಾಗದಲ್ಲಿ 1.37 ಕೋಟಿ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 36 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 35 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಇದೇ ಜುಲೈ ತಿಂಗಳ ಒಳಗಾಗಿ ಆಧಾರ್‌ ಸೀಡಿಂಗ್‌ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

“ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್‌, ಇನ್ಪುಟ್‌ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್‌ ಜೋಡಣೆ ಮಾಡಬೇಕು. ಸಾರ್ವಜನಿಕರೂ ಸಹ ತನಮ್ಮ ಜಮೀನಿನ ಮಾಲೀಕತ್ವಕ್ಕೆ ಭದ್ರತೆ ಅಗತ್ಯವಿದ್ದರೆ ಅಭಿಯಾನಕ್ಕೆ ರೈತರು ಮುಂದೆ ಬಂದು ಸಹಕಾರ ನೀಡಬೇಕು. ಇದರ ಮೂಲಕ ನಕಲಿ ವ್ಯವಹಾರ ಆಗುವುದನ್ನು ತಡೆಯಬಹುದು. ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರಂಟಿ ನೀಡಬಹುದು” ಎಂದರು.

ಶೀಘ್ರ ಪೋಡಿ ಮುಕ್ತ ಗ್ರಾಮ ಅಭಿಯಾನ

ರಾಜ್ಯದಲ್ಲಿ ಶೀಘ್ರ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ 22 ಲಕ್ಷ ಖಾಸಗಿ ಆರ್‌ಟಿಸಿ ಗಳಿಗೆ ಪೋಡಿ ಆಗಿಲ್ಲ. ಪ್ರತಿಯೊಂದು ಆರ್‌ಟಿಸಿಯಲ್ಲಿ ಮೂರು ರಿಂದ ನಾಲ್ಕು ಜನ ಆರ್‌ಟಿಸಿ ಮಾಲೀಕರು ಇರುತ್ತಾರೆ. ಈ ಜಮೀನುಗಳ ಪೋಡಿ ಆಗಿಲ್ಲ. ಇನ್ನೂ ಸರ್ಕಾರಿಂದ ಭೂ ಮಂಜೂರಾದವ ಜಮೀನುಗಳೂ ಪೋಡಿ ಆಗಿಲ್ಲ. ಹೀಗಾಗಿ ಪೋಡಿ ಮುಕ್ತ ಅಭಿಯಾನದ ಅಡಿಯಲ್ಲಿ ಇಂತಹ ಜನರನ್ನು ನಾವೇ ಗುರುತಿಸಿ ಸರ್ಕಾರದಿಂದ ನಾವೇ ಪೋಡಿ ಮಾಡಿಕೊಡಲಿದ್ದೇವೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments