ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹೊಂದಿದ ಪೆನ್ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಹಾಸನದ ಹದಿನೆಂಟು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಎಸ್ಐಟಿ ಅಧಿಕಾರಿಗಳ ತಂಡ ಮಂಗಳವಾರದಿಂದ ಬುಧವಾರ ಬೆಳಗಿನ ಜಾವ 3.30 ರವರೆಗೂ ಶೋಧಕಾರ್ಯ ನಡೆಸಿದೆ. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್ ಪಿ ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್ಗೌಡ, ಪ್ರಜ್ವಲ್ ರೇವಣ್ಣ ಮಾಜಿ ಕಾರುಚಾಲಕ ಕಾರ್ತಿಕ್, ಶಶಿ, ಚೇತನ್ಗೌಡ ನಿವಾಸದ ಮೇಲೂ ಎಸ್ಐಟಿ ತಂಡಗಳಿಂದ ಪ್ರತ್ಯೇಕ ದಾಳಿ ನಡೆದಿದೆ.
ಕ್ವಾಲಿಟಿ ಬಾರ್ ಶರತ್ ಅವರ ಬೆಂಗಳೂರಿನ ಗೋಪಾಲನಗರದ ಶೋಭಾ ಅಪಾರ್ಟ್ಮೆಂಟ್ನಲ್ಲಿರುವ ಫ್ಲಾಟ್ ಮೇಲೂ ದಾಳಿ ಮಾಡಿದ್ದ ಎಸ್ಐಟಿ ತಂಡ, ಶರತ್ ಅವರ ಐಫೋನ್ ವಶಕ್ಕೆ ಪಡೆದಿದ್ದು, ಅವರ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಯುಕ್ತ ದಾಖಲಾತಿ, ಎಲೆಕ್ಟ್ರಾನಿಕ್ ವಸ್ತುಗಳು ದೊರಕಿಲ್ಲ ಎಂದು ಎಸ್ಐಟಿ ಶೋಧನಾ ಪಂಚನಾಮೆಯಲ್ಲಿ ಉಲ್ಲೇಖಿಸಿದೆ.
ಕಾಂಗ್ರೆಸ್ಸಿಗರ ಮನೆ ಮೇಲೂ ದಾಳಿ ಪೆನ್ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಕಾಂಗ್ರೆಸ್ ಕಾರ್ಯಕರ್ತ, ಸಚಿವ ಜಮೀರ್ ಅಹಮದ್ ಅವರ ಆಪ್ತ ನವೀನ್ಗೌಡ ನಿವಾಸದ ಮೇಲೂ ಎಸ್ಐಟಿ ದಾಳಿ ನಡೆಸಿದೆ. ಬೇಲೂರಿನ ತಾಲ್ಲೂಕಿನ ನೆಲ್ಕೆ ಗ್ರಾಮದಲ್ಲಿರುವ ನವೀನ್ಗೌಡ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಪೆನ್ಡ್ರೈವ್ ಹಂಚಿದ ಸಂಬಂಧ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಒಟ್ಟಾರೆ ವಿವಿಧೆಡೆಯ ದಾಳಿಗಳಿಂದ ಎಸ್ಐಟಿ ತಂಡಗಳು ಮಹತ್ವದ ಸಾಕ್ಷ್ಯ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ಹೊರಟಿವೆ.
ಪೆನ್ಡ್ರೈವ್ ಹಂಚಿಕೆ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ನವೀನ್ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನಿತ್ಯ ನವೀನ್ಗೌಡ ಬಂಧನ ಯಾಕಾಗಿಲ್ಲ ಎಂದು ಪ್ರಶ್ನಿಸುತ್ತಲೇ ಇದ್ದಾರೆ.