ಮಾಜಿ ಮುಖ್ಯಮಂತ್ರಿ, ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಅವರು ಇಡೀ ರಾಷ್ಟ್ರದ ಸರಳ ಹಾಗೂ ಗಾಂಧಿವಾದಿ ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಬಿ.ಡಿ. ಜತ್ತಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜತ್ತಿ ಅವರು ತಮ್ಮ ಜೀವನಕಾಲದುದ್ದಕ್ಕೂ ಜ್ಞಾನ ಹಾಗೂ ಬಡವರ ಪರ ಕಾಳಜಿ ಹೊಂದಿದ್ದರು. ಗಾಂಧಿ ತತ್ವ ಹಾಗೂ ಬಸವ ತತ್ವದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಜೀವನ ನಡೆಸಿದರು. ಜೀವನದುದ್ದಕ್ಕೂ ಖಾದಿ ಧರಿಸಿದ ಮಾದರಿ ರಾಜಕಾರಣಿ” ಎಂದು ಹೇಳಿದರು.
ಪಾಂಡಿಚೆರಿ ಲೆಫ್ಟಿನೆಂಟ್ ಗವರ್ನರ್, ಓಡಿಶಾ ರಾಜ್ಯಪಾಲ, ಭಾರತದ ಉಪರಾಷ್ಟ್ರಪತಿ ಹಾಗೂ ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಜತ್ತಿ ಅವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಇಂದಿರಾ ಗಾಂಧಿ ಅವರು ಪರಾಭವಗೊಂಡಿದ್ದ ಸಮಯದಲ್ಲಿ ವಿರೋಧ ಪಕ್ಷಗಳು ದ್ವೇಷ ಬಿತ್ತುವ ಕೆಲಸ ಮಾಡಿದಾಗ, ದೇಶದಲ್ಲಿ ಯಾವುದೇ ತೊಂದರೆ ಆಗದಂತೆ ದೇಶ ನಡೆಸಿದ ಕೀರ್ತಿ ನಮ್ಮ ರಾಜ್ಯದ ಜತ್ತಿ ಅವರಿಗೆ ಸಲ್ಲುತ್ತದೆ ಎಂದು ಹರಿಪ್ರಸಾದ್ ಹೇಳಿದರು.
“ಈಗಿನ ರಾಜಕಾರಣದಲ್ಲಿ ಅಧಿಕಾರ ಹೋದ ಬಳಿಕ ಜೈಲಿಗೆ ಹಾಕುತ್ತಾರೆ. ಆದರೆ ಜತ್ತಿ ಅವರು ಯಾವುದೇ ಅವಕಾಶ ನೀಡಲಿಲ್ಲ. ಸಂಸತ್ತಿನ ಮೂಲಕ ಇಂದಿರಾ ಗಾಂಧಿ ಅವರನ್ನು ಜೈಲಿಗೆ ಹಾಕಿಸಲಾಯಿತು” ಎಂದು ಅವರು ಹೇಳಿದರು.
ಜತ್ತಿ ಅವರ ಮರಿಮೊಮ್ಮಗ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ಮಾಧ್ಯಮಗಳನ್ನು ಧೈರ್ಯವಾಗಿ ಎದುರಿಸಿ ಮಾತನಾಡಿದ್ದಾರೆ. ಕಳೆದ 40 ವರ್ಷಗಳಿಂದ ಜತ್ತಿ ಅವರ ಕುಟುಂಬದಿಂದ ಯಾರೂ ರಾಜಕಾರಣಕ್ಕೆ ಬಂದಿರಲಿಲ್ಲ. ಈಗ ಅವರ ಮರಿಮೊಮ್ಮಗ ರಾಜಕಾರಣಕ್ಕೆ ಬಂದಿದ್ದಾರೆ ಎಂದು ಹರಿಪ್ರಸಾದ್ ತಿಳಿಸಿದರು.
ಜತ್ತಿ ಅವರು ಧಾರ್ಮಿಕವಾಗಿ ನಂಬಿಕೆ ಇಟ್ಟುಕೊಂಡವರಾಗಿದ್ದರೂ, ಎಂದೂ ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. “ಯಾವ ಧರ್ಮವನ್ನು ನಿಮ್ಮ ಮನೆಯಲ್ಲಿ ಆಚರಣೆ ಮಾಡಬಹುದು. ಆದರೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡಬಾರದು” ಎಂಬ ಗಾಂಧಿ ತತ್ವವನ್ನು ಅನುಸರಿಸಿದರು. ಅವರು ಅಂಧಭಕ್ತರಾಗಿರಲಿಲ್ಲ. ಮಹಾತ್ಮ ಗಾಂಧಿ ಮತ್ತು ನೆಹರೂ ಅವರೊಂದಿಗೆ ಒಡನಾಟ ಹೊಂದಿದ್ದರೂ ಯಾರನ್ನೂ ಅನುಕರಣೆ ಮಾಡಲಿಲ್ಲ. ಜಮಖಂಡಿಯಿಂದ ಈ ಮಟ್ಟಕ್ಕೆ ರಾಜಕಾರಣದಲ್ಲಿ ಬರುವುದು ಸಾಮಾನ್ಯ ಮಾತಲ್ಲ ಎಂದು ಅವರು ಹೇಳಿದರು.
1958ರಿಂದ 1962ರವರೆಗೆ ನಿಷ್ಕಳಂಕ ಆಡಳಿತ ನೀಡಿದ್ದ ಜತ್ತಿ ಅವರ ಬಗ್ಗೆ ಕಾಂಗ್ರೆಸ್ ಪಕ್ಷದವರು ಹೆಮ್ಮೆ ಪಡಬೇಕು ಮತ್ತು ಅವರ ನಡೆಯನ್ನು ಪಾಲಿಸಬೇಕು. ಅವರ ಸರಳತೆ ಹಾಗೂ ಮೋಸ ಮಾಡದ ನೀತಿಯನ್ನು ಅನುಸರಿಸಬೇಕು. ಆಗ ಮಾತ್ರ ಅವರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದರು.


