ಕಾಂಗ್ರೆಸ್ ಪಕ್ಷದಲ್ಲಿ ಪೇಮೆಂಟ್ ಕೊಟ್ಟು ಅಧ್ಯಕ್ಷರಾಗುವುದು ರೂಢಿಯೂ ಇಲ್ಲ, ಕೊಲೆ ಕೇಸಿನಲ್ಲಿ ಗಡಿಪಾರಾದವರು, ಪೋಕ್ಸೋ ಆರೋಪಿಗಳು, ಕ್ರಿಮಿನಲ್ಸ್ ಹಾಗೂ ಜೈಲುವಾಸಿಗಳನ್ನು ಅಧ್ಯಕ್ಷರನ್ನಾಗಿ ಮಾಡುವ ಕೆಟ್ಟ ಪರಂಪರೆಯೂ ಇಲ್ಲ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕರ ಹರಿಪ್ರಸಾದ್ ಹೇಳಿದ್ದಾರೆ.
ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ಧಿಸದೇ ಇದ್ದ ನರೇಂದ್ರ ಮೋದಿ ಅವರನ್ನು ಗುಜರಾತಿನಲ್ಲಿ ಮುಖ್ಯಮಂತ್ರಿ ಮಾಡಿದವರು ಯಾರು? ಯಾವ ಜನರಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು ಎನ್ನುವ ಇತಿಹಾಸವಾದರೂ ಬಿಜೆಪಿಗೆ ನೆನಪಿದೆಯೇ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಮಡಿದ್ದಾರೆ.
ಯಾವ ಚುನಾವಣೆಯನ್ನೂ ನಡೆಸದೇ, ಕನಿಷ್ಟಪಕ್ಷ ಆರ್ ಎಸ್ ಎಸ್ ಸಂಘಪರಿವಾರದಲ್ಲೇ ಚುನಾವಣೆ ಎದುರಿಸದ ಮೋಹನ್ ಭಾಗವತ್ ಗೆ ಯಾವ ಜನರು ಆಯ್ಕೆ ಮಾಡಿದ್ದಾರೆ?”ಜೀ” ಗಳನ್ನು ಚುನಾವಣಾ ಚಾಣಕ್ಯ ಎಂದು “ಹುಜೂರ್” ಎನ್ನುವ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಎಂದೂ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿಲ್ಲ, ಬರುವುದೂ ಇಲ್ಲ ಎಂದಿದ್ದಾರೆ
ಬಿಜೆಪಿಯ ಪಾಕಿಸ್ತಾನದ ಮೇಲಿನ ಪ್ರೀತಿಯಂತೂ ನಿನ್ನೆ ಮೊನ್ನೆಯದಲ್ಲ ಅದಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ದ್ವಿ ರಾಷ್ಟ್ರ ಸಿದ್ದಾಂತದ ಪ್ರತಿಪಾದಿಸಿದ ಸಾವರ್ಕರ್ ಇಂದ ಹಿಡಿದು ಇಂದಿನ ರಸಬಾಳೆ, ಹೊಸಬಾಳೆಯ “ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ಮುಚ್ಚಬಾರದು” ಎನ್ನುವವರೆಗೂ ಮುಂದುವರೆಯುತ್ತಲೇ ಇದೆ ಎಂದು ತಿಳಿಸಿದ್ದಾರೆ.
ಹೌದು ಆರ್ ಎಸ್ ಎಸ್ ಮತ್ತು ಬಿಜೆಪಿ ಪ್ರತಿಪಾದಿಸುವ ನಕಲಿ ಹಿಂದೂತ್ವವನ್ನು ವಿರೋಧಿಸುತ್ತಲೇ ಇದ್ದೇನೆ, ವಿರೋಧಿಸುತ್ತಲೇ ಇರುತ್ತೇನೆ. ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ ಎಂದು ಎಚ್ಚರಿಸಿದ್ದಾರೆ.


