ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತಎಣಿಕೆಗೆ ಸಂಬಂಧಿಸಿದಂತೆ ರಾತ್ರಿಯಿಡೀ ಹೈಡ್ರಾಮಾ ನಡೆದಿದ್ದು, ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆಲುವು ಎಂದು ಘೋಷಿಸಲ್ಪಟ್ಟಿದ್ದ ಕಾಂಗ್ರೆಸ್ ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಭಾರಿ ಹಿನ್ನಡೆಯಾಗಿದೆ.
ಅಂಚೆ ಮತಗಳ ಮರು ಮತಎಣಿಕೆಯಲ್ಲಿ ನಿನ್ನೆ ಸಾಯಂಕಾಲ ಟಿ ಡಿ ರಾಜೇಗೌಡ ಅವರು ವಿಜಯ ಸಾಧಿಸಿದರು ಎಂದು ಹೇಳಲಾಗಿತ್ತು. ಆದರೆ ಮತ ಏಣಿಕೆಯಲ್ಲಿ ಭಾರೀ ಗೊಂದಲಗಳು ಉಂಟಾಗಿತ್ತು. ನಿನ್ನೆ ಬೆಳಗ್ಗೆ ಏಳು ಗಂಟೆಗೆ ಆರಂಭವಾದ ಮತ ಎಣಿಕೆ ಮಧ್ಯರಾತ್ರಿಯವರಿಗೆ ನಡೆಯಿತು.
ಇಂದು ಬೆಳಗ್ಗೆ ಎಲ್ಲ ಗೊಂದಲಗಳಿಗೆ ಮಹತ್ವದ ತಿರುವು ಸಿಕ್ಕಿದೆ. 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆ ವೇಳೆ ಸಿಂಧು (Valid) ಎಂದು ಪರಿಗಣಿಸಲಾಗಿದ್ದ ಮತಗಳು, ಈಗಿನ ಮರು ಎಣಿಕೆ ವೇಳೆ ತಿರಸ್ಕೃತಗೊಂಡಿವೆ.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಿ ಜೀವರಾಜ್, ಸ್ಟ್ರಾಂಗ್ ರೂಂನಿಂದನೂ ಗೊಂದಲವನ್ನು ನೋಡಿದ್ದೇವೆ. ಸ್ಟ್ರಾಂಗ್ ರೂಂನ್ನು ಆ ರೀತಿ ಗೊಂದಲದಲ್ಲಿ ಏಕೆ ಇಟ್ಟುಕೊಂಡರು ಎಂದು ಗೊತ್ತಿಲ್ಲ, ನಿನ್ನೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಅಂಚೆ ಮತ ಎಣಿಕೆ ಈಗಷ್ಟೇ ಮುಕ್ತಾಯವಾಗಿದೆ. ಗೊಂದಲ ಅಲ್ಲಿಂದಲೇ ಆರಂಭವಾಗಿತ್ತು.
ಇಲ್ಲಿಗೆ ಬಂದ ಮೇಲೆ 22 ಟ್ರಂಕ್ ಗಳನ್ನು ತೆರೆದು ಅವುಗಳಲ್ಲಿ ಏನೇನು ಇದೆ ಎಂದು ನೋಡಿ ಕೊನೆಗೆ ಬ್ಯಾಲೆಟ್ ತೆಗೆದು ಎಣಿಕೆ ಮಾಡಿದರು. 2023ರಲ್ಲಿ ಅಕ್ರಮ ಎಂದು ತೆಗೆದಿದ್ದು ಈಗ ಕೈಬಿಟ್ಟಿದ್ದಾರೆ, ಸಿಂಧು ಮತಗಳನ್ನು ತೆಗೆದುಕೊಂಡು ಲೆಕ್ಕಾಚಾರ ನಡೆಸಿದಾಗ ಈಗಿನ ಪ್ರಕಾರ ನನಗೆ ಬಹುಮತ ಸಿಗುತ್ತದೆ. ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ, ಚುನಾವಣಾ ಆಯುಕ್ತರ ಮುಂದೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ, ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.


