ರಾಜ್ಯದ ಒಟ್ಟು ಹೊಣೆಗಾರಿಕೆ 8.14 ಲಕ್ಷ ಕೋಟಿ ರೂ. ಎಂದು ಮಾಧ್ಯಮಗಳು ಅಂದಾಜಿಸಿರುವುದು ವಾಸ್ತವಾಂಶಕ್ಕಿಂತ ಹೆಚ್ಚಿನದಾಗಿರುತ್ತದೆ. ರಾಜ್ಯದ ಒಟ್ಟು ಹೊಣೆಗಾರಿಕೆ 2025-26 ರ ಅಂತ್ಯಕ್ಕೆ 7.64,655 ಕೋಟಿ ರೂ.ಗಳು ತಲುಪಲಿದೆ ಹಾಗೂ ಜಿ.ಎಸ್.ಡಿ.ಪಿಯ ಶೇ.25ರ ಮಿತಿಯೊಳಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಒಟ್ಟು ಹೊಣೆಗಾರಿಕೆಗಳು 2025-26ರಲ್ಲಿ ರೂ. 8.14 ಲಕ್ಷ ಕೋಟಿ ತಲುಪಲಿವೆ ಎಂದು ಪ್ರಕಟಿಸಿದ ಪತ್ರಿಕಾ ವರದಿಯ ಕುರಿತು ಸರ್ಕಾರ ಮಾಧ್ಯಮ ಪ್ರಕಟಣೆ ಹೊರಡಿಸಿ ಸ್ಪಷ್ಟಿಕರಣ ನೀಡಿದೆ.
ಸ್ಪಷ್ಟೀಕರಣದಲ್ಲಿ ಏನಿದೆ?
1. ರಾಜ್ಯದ ಒಟ್ಟು ಹೊಣೆಗಾರಿಕೆಗಳು ಮಾರ್ಚ್ 2026ರ ಅಂತ್ಯಕ್ಕೆ 7.64.655 ಕೋಟಿ ರೂ.ಗಳಿರುತ್ತದೆ ಎಂದು 2025-26ನೇ ಸಾಲಿನ ಆಯವ್ಯಯದಲ್ಲಿ ಅಂದಾಜಿಸಲಾಗಿತ್ತು. ಇದು ಜಿ.ಎಸ್.ಡಿ.ಪಿ ಯ ಶೇ.24.91 ರಷ್ಟಿರುತ್ತದೆ.
2. ದಿನಪತ್ರಿಕೆಯಲ್ಲಿ ರಿಸರ್ವ್ ಬ್ಯಾಂಕ್ ವರದಿಯನ್ನು ಉಲ್ಲೇಖಿಸಿ 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು 8.14 ಲಕ್ಷ ಕೋಟಿ ತಲುಪಲಿದ್ದು, ಜಿ.ಎಸ್.ಡಿ.ಪಿಯ ಶೇ.26.5ರಷ್ಟಿರುತ್ತದೆ ಎಂದು ತಿಳಿಸಲಾಗಿದೆ.
3. ರಿಸರ್ವ್ ಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿರುವ ರಾಜ್ಯದ ಒಟ್ಟು ಹೊಣೆಗಾರಿಕೆ ಹಾಗೂ ವಾಸ್ತವಾಂಶದಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆಗಳಿಗೆ ಇರುವ ವ್ಯತ್ಯಾಸವು ರಾಜ್ಯದ ಹೊಣೆಗಾರಿಕೆಗೆ ಸೇರದ ಕೆಲ ಅಂಶಗಳನ್ನು ಸೇರಿಸಿದ ಕಾರಣದಿಂದ ಆಗಿರುತ್ತದೆ. ಈ ಅಂಶಗಳನ್ನು ಕೆಳಗೆ ವಿವರಿಸಲಾಗಿದೆ.
RBI ವರದಿಯಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿ.ಎಸ್.ಟಿ ಪರಿಹಾರ ನೀಡುವ ನಿಮಿತ್ತ ರಾಜ್ಯದ ಪರವಾಗಿ ಪಡೆದ ರೂ. 20.412 ಕೋಟಿಗಳ ಸಾಲವನ್ನು ರಾಜ್ಯದ ಹೊಣೆಗಾರಿಕೆಗಳಾಗಿ ಸೇರಿಸಲಾಗಿದೆ. ಆದರೆ ಈ ಸಾಲಗಳ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದಾಗಿರುತ್ತದೆ. ಕೇಂದ್ರ ಸರ್ಕಾರವು ಸೆಸ್ ಸಂಗ್ರಹಿಸುವ ಮೂಲಕ ಈ ಸಾಲವನ್ನು ತೀರಿಸುತ್ತದೆ.
ಸರ್ಕಾರವು ಕೆಲ ಸೆಸ್ಗಳನ್ನು ವಿಧಿಸುವ ಮೂಲಕ ತೆರಿಗೆ ರಾಜಸ್ವವನ್ನು ಸಂಗ್ರಹಿಸುತ್ತದೆ. ಈ ಸೆಸ್ಗಳನ್ನು ಸಾರ್ವಜನಿಕ ಖಾತೆಯಲ್ಲಿ ಜಮಾ ಮಾಡಿ, ಪ್ರಮುಖ ಮೂಲಸೌಕರ್ಯ ಯೋಜನೆಗಳ ಬಂಡವಾಳ ಹೂಡಿಕೆಗೆ ಬಳಸಲಾಗುತ್ತದೆ. ಈ ಸೆಸ್ ನಿಂದ ಸ್ವೀಕೃತವಾಗಿ ಸಾರ್ವಜನಿಕ ಖಾತೆಯಲ್ಲಿ ಬಾಕಿ ಉಳಿದಿರುವ ಸುಮಾರು 23,810 ಕೋಟಿ ರೂ. ಗಳಷ್ಟು ಮೊತ್ತವನ್ನು ಸಾರ್ವಜನಿಕ ಖಾತೆಯ ಹೂಡಿಕೆ ಮೊತ್ತ” ಎಂಬ ಪ್ರತ್ಯೇಕ ವರ್ಗದಲ್ಲಿ ಸೇರಿಸಲಾಗಿರುತ್ತದೆ. ಇದರಿಂದ ಸಾರ್ವಜನಿಕ ಖಾತೆಯಲ್ಲಿ ಉಳಿದಿರುವ ಬಾಕಿ ಮೊತ್ತ ಎರಡೆರಡು ಬಾರಿ ಪರಿಗಣಿಸಲಾಗಿರುತ್ತದೆ.
ರಿಸರ್ವ್ ಬ್ಯಾಂಕ್ ನ ಶಿಫಾರಸಿನಂತೆ ರಾಜ್ಯ ಸರ್ಕಾರವು ಋಣ ನಿರ್ವಹಣೆ ಹಾಗೂ ಸರ್ಕಾರಿ ಖಾತರಿಗಳ ನಿರ್ವಹಣೆಗಾಗಿ ಸುಮಾರು 16,300 ಕೋಟಿ ರೂ.ಗಳಷ್ಟು Consolidated Sinking Fund’ ಮತ್ತು Guarantee Redemption Fundಗಳಲ್ಲಿ ಹೂಡಿಕೆ ಮಾಡಿದೆ. ಇವುಗಳನ್ನು ಸಹ ರಾಜ್ಯದ ಹೊಣೆಗಾರಿಕೆಗಳಾಗಿ ಪರಿಗಣಿಸಲಾಗಿದೆ. ರಿಸರ್ವ್ ಬ್ಯಾಂಕ್ ನ ಶಿಫಾರಸಿನ ಆಧಾರದ ಮೇಲೆ ರಾಜ್ಯ ಸರ್ಕಾರವು ಈ ಹೂಡಿಕೆಗಳನ್ನು ಮಾಡಿದ್ದು, ಈ ಹೂಡಿಕೆಗಳು ರಾಜ್ಯದ ಹೊಣೆಗಾರಿಕೆಗಳಾಗುವುದಿಲ್ಲ.
ಮೇಲಿನ ಕಾರಣಗಳಿಂದಾಗಿ ಸುಮಾರು ರೂ. 60,500 ಕೋಟಿಗಳಷ್ಟು ಮೊತ್ತವನ್ನು ರಾಜ್ಯದ ಹೊಣೆಗಾರಿಕೆಗಳಾಗಿ ತಪ್ಪಾಗಿ ಪರಿಗಣಿಸಲಾಗಿದೆ. ಲೆಕ್ಕ ಪತ್ರದಲ್ಲಿ ಈ ಅಂಶಗಳನ್ನು ಮರು ವರ್ಗೀಕರಿಸಿ ಲೆಕ್ಕ ಹೊಂದಾಣಿಕೆಗಳನ್ನು ಮಾಡುವಂತೆ ರಾಜ್ಯ ಸರ್ಕಾರವು ಮಹಾಲೇಖಪಾಲರಿಗೆ ತಿಳಿಸಿರುತ್ತದೆ. 4. ಕಳೆದ 4 ವರ್ಷಗಳಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆಗಳು ಕೆಳಕಂಡಂತಿದೆ.



