Homeಕರ್ನಾಟಕಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸಲು 'ನನ್ನ ಮತ-ನನ್ನ ಹಕ್ಕು' ಕಾರ್ಯಕ್ರಮ: ಡಿ ಕೆ ಶಿವಕುಮಾರ್

ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸಲು ‘ನನ್ನ ಮತ-ನನ್ನ ಹಕ್ಕು’ ಕಾರ್ಯಕ್ರಮ: ಡಿ ಕೆ ಶಿವಕುಮಾರ್

ವಿದ್ಯಾರ್ಥಿ, ಯುವ ಜನರಲ್ಲಿ ನಾಯಕತ್ವ ಗುಣವನ್ನು ಬೆಳೆಸಬೇಕಿದೆ. ಮತದಾನ, ಪ್ರಜಾಪ್ರಭುತ್ವದ ಮೌಲ್ಯವನ್ನು ಅರಿತುಕೊಳ್ಳಲು ‘ನನ್ನ ಮತ, ನನ್ನ ಹಕ್ಕು’ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಮತದಾನ ಮದ್ದುಗುಂಡಿಗಿಂತ ಬಲಾಢ್ಯ ಎನ್ನುವ ಮಾತಿದೆ. ಮಹಾರಾಜರು ಮನೆಯಲ್ಲಿ ಕುಳಿತಿದ್ದಾರೆ. ಮತದಾನದ ಹಕ್ಕಿನಿಂದ ಆಯ್ಕೆಯಾದವರು ಜನಸೇವೆ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ನಾಯಕರ ಉದಯವಾಗಿದ್ದೇ ಮತದಾನದ ಹಕ್ಕಿನಿಂದ.‌ ಜನರ ಮತಗಳಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿದ್ದೇವೆ” ಎಂದರು.

“ಅರ್ಜುನ ಕೃಷ್ಣನನ್ನು ಒಮ್ಮೆ ಕೇಳುತ್ತಾನೆ. ಎಲ್ಲರು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ, ನಿಂದಿಸುತ್ತಿದ್ದಾರೆ, ಬಾಣಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಏನೂ ತೋಚದಾಗಿದೆ‌ ಎಂದು.‌ ಆಗ ಕೃಷ್ಣ ‌ಹೇಳುತ್ತಾನೆ, ನಿನ್ನ ಮೇಲೆ ಎಷ್ಟೇ ‌ದಾಳಿಯಾಗಬಹುದು, ಆದರೆ ಕಾಪಾಡುವುದಕ್ಕೆ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ ಎಂದು. ಅದೇ ರೀತಿ ಪ್ರಜಾಪ್ರಭುತ್ವ ‌ವ್ಯವಸ್ಥೆಯಲ್ಲಿ ಮತ ಹಾಗೂ ಮತದಾನದ ಹಕ್ಕೇ ನಮ್ಮನ್ನು ಕಾಪಾಡುವುದು. ವಿಚಾರ ಏನೇ ಇರಬಹುದು, ಆದರೆ ಜನರು ತೆಗೆದುಕೊಳ್ಳುವ ತೀರ್ಮಾನ ನಾಯಕರನ್ನು ತಯಾರು ಮಾಡುತ್ತದೆ” ಎಂದು ಹೇಳಿದರು.

“ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಡೀ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಈ ಕಲ್ಪನೆ ಇದೇ ನೆಲದಲ್ಲಿ ಹುಟ್ಟಿತು. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ತತ್ವವನ್ನು ಸಾರಿ, ಜಾತಿ, ಧರ್ಮ, ಪಂಥಗಳ ಬೇಧವಿಲ್ಲದ ಸಮ ಸಮಾಜದ ಕನಸು 900 ವರ್ಷಗಳ ಹಿಂದೆ ಹುಟ್ಟಿತು” ಎಂದರು.

“ಚಾಮರಾಜನಗರದ ಸಂಸದರಾಗಿದ್ದ ದಿವಂಗತ ಧ್ರುವನಾರಾಯಣ ಅವರು ಒಂದು ಮತದ ಅಂತರದಿಂದ ಜಯಗಳಿಸಿದರು. ಅವರ ವಿರುದ್ದ ನಿಂತಿದ್ದ‌ ಪ್ರಸ್ತುತ ಕೊಳ್ಳೆಗಾಲದ ಶಾಸಕರಾಗಿರುವ ಕೃಷ್ಣಮೂರ್ತಿ ಅವರ ಚಾಲಕ ಸಮಯ ಮೀರಿ ಹೋಯಿತು ಎಂದು ಮತ ಹಾಕಲಿಲ್ಲ. ಇದರಿಂದ ಅವರು ಸೋಲಬೇಕಾಯಿತು. ರಾಜಸ್ಥಾನದ ಸಿ.ಪಿ.ಜೋಶಿಯವರು ಎರಡು ಅಥವಾ ಮೂರು ಮತಗಳಿಂದ ಸೋತರು.‌ ಇಲ್ಲದಿದ್ದರೆ ಅಂದು ಮುಖ್ಯಮಂತ್ರಿಗಳಾಗಬೇಕಾತ್ತು. ಆದ ಕಾರಣಕ್ಕೆ ಒಂದೊಂದು ಮತವೂ ಅಮೂಲ್ಯ” ಎಂದು ಹೇಳಿದರು.

“ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಪತ್ರಿಕಾಂಗ ಇವು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ನಾವು ತಪ್ಪು ಮಾಡಿದರೆ ಕಾಯಲು ನ್ಯಾಯಾಂಗವಿದೆ. ಪತ್ರಿಕಾಂಗ ಎಲ್ಲರ ತಪ್ಪನ್ನು ಸಮಾಜಕ್ಕೆ ತೋರಿಸುತ್ತದೆ. ಆದರೆ ಇಂದು ಮತಗಳ್ಳತನಕ್ಕೆ ಕೆಲವರು ಕೈ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಾಕಷ್ಟು ಹೆಚ್ಚು-ಕಡಿಮೆಯಾಗಿದೆ. ಇದರ ವಿರುದ್ದ ರಾಹುಲ್ ಗಾಂಧಿಯವರು ಹೋರಾಟ ರೂಪಿಸಿದ್ದಾರೆ” ಎಂದರು.

“ಇಡೀ ದೇಶಕ್ಕೆ ಮಾದರಿಯಾಗುವಂತಹ ಸರ್ಕಾರವನ್ನು ಕರ್ನಾಟಕದ ಜನರು ಅಧಿಕಾರಕ್ಕೆ ‌ತಂದಿದ್ದಾರೆ. ಬಲಿಷ್ಠವಾದ ಸಮಾಜದ ಬಗ್ಗೆ ಕಳಕಳಿ ಇರುವ ಸರ್ಕಾರವನ್ನು ಜನರು ಆರಿಸಲು ಮತದಾನದ ಹಕ್ಕೇ ಕಾರಣ. ಇದಕ್ಕಾಗಿ ಪ್ರಜಾಪ್ರಭುತ್ವ ಉಳಿಯಬೇಕು. ಮತದಾನದ ಹಕ್ಕು ಉಳಿಯಬೇಕು‌. ಯುವ ಪೀಳಿಗೆ ಈ ದೇಶದ ಆಸ್ತಿಯಾಗಬೇಕು” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments