ಯುಪಿಎ ಸರಕಾರದ ಅವಧಿಯಲ್ಲಿ ಭಾರಿ ಹಗರಣಗಳು ನಡೆದಿದ್ದವು. ಬಳಿಕ ಎನ್.ಡಿ.ಎ. ಅವಧಿಯಲ್ಲಿ ಈ ದೇಶಕ್ಕೆ ಉಜ್ವಲ ಭವಿಷ್ಯವಿದೆ; ಭಾರತದಲ್ಲಿ ಭ್ರಷ್ಟಾಚಾರರಹಿತ ಆಡಳಿತ ನೀಡಲು ಸಾಧ್ಯವಿದೆ ಎಂಬುದನ್ನು ನರೇಂದ್ರ ಮೋದಿ ಅವರ ಸರಕಾರ ಸಾಬೀತುಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಕಲಬುರಗಿಯಲ್ಲಿ ಶನಿವಾರ ಮಾತನಾಡಿ, “ಭಾರತವು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತಲುಪಬಹುದು ಎಂಬ ವಿಶ್ವಾಸವನ್ನು ಎನ್ಡಿಎ ಸರಕಾರ ನೀಡಿದೆ. 11 ವರ್ಷಗಳ ನರೇಂದ್ರ ಮೋದಿ ಅವರ ಸರಕಾರವು ದಿಟ್ಟ ನಿರ್ಧಾರ ತೆಗೆದುಕೊಂಡು ಭಾರತವನ್ನು ಸದೃಢವಾಗಿ ಮುನ್ನಡೆಸಿ ದೇಶದ ಜನತೆಗೆ ಸಂತಸ ಕೊಟ್ಟಿದೆ” ಎಂದರು.
ನಕ್ಸಲಿಸಂ ಬುಡಸಮೇತ ನಾಶ, 370ನೇ ವಿಧಿ ರದ್ದು
“ಆಂತರಿಕ ಭದ್ರತೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಗರಿಮೆಗಳಿಗೆ ಮೋದಿಜೀ ಅವರ ಆಡಳಿತ ಸಾಕ್ಷಿಯಾಗಿದೆ. 10-15 ವರ್ಷಗಳ ಹಿಂದೆ ದೇಶವು ಉಗ್ರಗಾಮಿ ಚಟುವಟಿಕೆಗಳಿಂದ ತತ್ತರಿಸಿ ಹೋಗಿತ್ತು. ನಕ್ಸಲಿಸಂ ಪಿಡುಗು ದೇಶದ ಅನೇಕ ರಾಜ್ಯಗಳಿಗೆ ವಿಸ್ತರಿಸಿ ದೇಶದಲ್ಲಿ ಅಸ್ಥಿರತೆ ಕಾಡುತ್ತಿತ್ತು. ಭಾರತದ ಬಗ್ಗೆ ಜಗತ್ತಿನಲ್ಲಿ ವಿಶ್ವಾಸ ಬರುತ್ತಿರಲಿಲ್ಲ” ಎಂದು ತಿಳಿಸಿದರು.
“2014ರಲ್ಲಿ ಪರಿಸ್ಥಿತಿ ಹೇಗಿತ್ತೆಂದರೆ, ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರವು ಸತತವಾಗಿ ಹಗರಣಗಳಲ್ಲಿ ಸಿಲುಕಿ ಹಾಕಿಕೊಂಡಿತ್ತು. 2 ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣ, ವಸತಿ ಹಗರಣ ಸೇರಿ 12 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹಗರಣಗಳು ಈ ದೇಶದಲ್ಲಿ ಯುಪಿಎ ಸರಕಾರದಲ್ಲಿ ನಡೆದಿತ್ತು. ಯುವಜನತೆಗೆ ಭಾರತದ ಅಭಿವೃದ್ಧಿ ಕುರಿತ ವಿಶ್ವಾಸವೇ ಹೊರಟುಹೋಗಿತ್ತು ಎಂದು ವಿವರಿಸಿದರು. ಭ್ರಷ್ಟಾಚಾರರಹಿತ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ದೇಶದ ಜನತೆ ಬಂದಿದ್ದರು” ಎಂದು ವಿಶ್ಲೇಷಿಸಿದರು.
ಪುಕ್ಕಟೆ ಪ್ರಚಾರ ಗಿಟ್ಟಿಸುವ ಸಿಎಂ- ಡಿಸಿಎಂ ಹಪಾಹಪಿ
“ಪುಕ್ಕಟೆ ಪ್ರಚಾರ ಗಿಟ್ಟಿಸುವ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳ ಹಪಾಹಪಿಯಿಂದ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನ ಅಮಾಯಕರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ” ಎಂದರು.
ಶಾಸಕ ಡಾ. ಅವಿನಾಶ್ ಜಾಧವ್, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಬಿ ಪಾಟೀಲ್, ಕಲಬುರ್ಗಿ ಗ್ರಾಮಾತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್ ಮತ್ತಿತರ ಮುಖಂಡರು ಇದ್ದರು