ಕಾಂಗ್ರೆಸ್ ಸರಕಾರವು ದಕ್ಷಿಣ ಕನ್ನಡಕ್ಕೆ ಮಾತ್ರವಲ್ಲ, ರಾಜ್ಯದ ಯಾವುದೇ ಕ್ಷೇತ್ರಕ್ಕೂ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಬಳಿಕ ಅನುದಾನವೂ ಇಲ್ಲ, ಮುಖ್ಯಮಂತ್ರಿಗಳು ದಕ್ಷಿಣ ಕನ್ನಡಕ್ಕೆ ಬರುವುದೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಮಂಗಳೂರಿನಲ್ಲಿ ಮಾಧ್ಯಮಗಳ ಗುರುವಾರ ಮಾತನಾಡಿದ ಅವರು, “ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸೇರಿ ದಕ್ಷಿಣ ಕನ್ನಡಕ್ಕೆ, ಮಂಗಳೂರಿನಲ್ಲಿರುವ ವಿಧಾನಸಭಾ ಕ್ಷೇತ್ರಕ್ಕೆ 19,500 ಕೋಟಿ ಅನುದಾನ ಕೊಟ್ಟಿದ್ದರು” ಎಂದರು.
“ಸಿದ್ದರಾಮಯ್ಯನವರು ಬೆಂಗಳೂರಿನ ಮುಖ್ಯಮಂತ್ರಿಗಳೇ ಅಥವಾ ರಾಜ್ಯದ ಮುಖ್ಯಮಂತ್ರಿಗಳೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಬಸವರಾಜ ರಾಯರೆಡ್ಡಿ ಅವರದು ದಿಟ್ಟವಾಗಿ ಮಾತನಾಡುವ ಸ್ವಭಾವ. ಅವರು ಸತ್ಯವನ್ನೇ ಹೇಳಿದ್ದಾರೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಸೇರಿ ಬೇರೆಬೇರೆ ಹಗರಣಗಳ ಬಳಿಕ ಅವರು ಕೂಡ ಬೇಸತ್ತಿದ್ದಾರೆ” ಎಂದು ತಿಳಿಸಿದರು.
“ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಅಭಿವೃದ್ಧಿ ವಿಷಯದಲ್ಲಿ ಇಡೀ ದೇಶದಲ್ಲಿ ಕರ್ನಾಟಕವು ಗುಜರಾತ್ ನಂತರದ ಸ್ಥಾನವನ್ನು ಪಡೆದಿತ್ತು. ಇವತ್ತು ಭ್ರಷ್ಟಾಚಾರದಲ್ಲಿ ಕರ್ನಾಟಕವು ನಂಬರ್ ಒನ್ ಸ್ಥಾನಕ್ಕೆ ತಲುಪಿದೆ ಎಂದರೆ ಅದರ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಆ ಸತ್ಯವನ್ನು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ” ಎಂದು ಹೇಳಿದರು.
“ದಲಿತರಿಗೆ ಅನ್ಯಾಯ ಮಾಡುವವರು ಕಾಂಗ್ರೆಸ್ ಪಕ್ಷದವರು. ಮೊನ್ನೆ ರಾಹುಲ್ ಗಾಂಧಿ ಅವರನ್ನು ನೋಡಿದ್ದೀರಿ. ಗಾಂಧೀಜಿ, ಬಾಬಾಸಾಹೇಬ ಅಂಬೇಡ್ಕರ್ ಕುರಿತ ಅವರ ಕಳಕಳಿ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಬಿಜೆಪಿ, ದಲಿತರ ಪರವಾಗಿ ಯೋಜನೆಗಳನ್ನು ನೀಡುತ್ತಿದೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.